Friday, October 22, 2010

ನನಸಾಗುವವಳ್ಯಾರೊ?












ನಿನ್ನ ಹುಡುಕಿ-ಹುಡುಕಿ ಸುಸ್ತಾದೆ
ಆದರೂ ನಿನ್ನ ಹುಡುಕಾಟ ಜಾಸ್ತಿಯಾಗಿದೆ

ಎಲ್ಲರಲ್ಲೂ ನಿನ್ನ ಕಾಣುವ ಕೌತುಕ
ನೀ ಎಲ್ಲೂ ಕಾಣದಿರುವ ಆತಂಕ

ಈ ಹೃದಯ ಪ್ರೀತಿಯರಸಿ ಹೊರಟಿದೆ
ಪ್ರೀತಿ ಕೊಡುವೆನೆಂದ ಎಷ್ಟೊ ಹೃದಯಗಳನ್ನು ತಿರಸ್ಕರಿಸಿದೆ

ನೀನಿರುವೆಯಾದರೂ ಎಲ್ಲಿ
ತುಂಬ ಕಾಯಿಸಿ ಕಾಣಿಸಿಕೊಳ್ಳುವುದಲ್ಲವೆ ನಿನ್ನ ಖುಷಿ

          ಹೃದಯದಲ್ಲಿ ಪ್ರೀತಿಯ ಅರಮನೆಯಿದೆ. ಅರಮನೆಯ ಗೋಡೆ-ಕಂಬಗಳಲ್ಲಿ ಪ್ರೇಯಸಿಯ ಗುಣಗಾನವಿದೆ. ಅಲ್ಲಲ್ಲಿ ತುಂಬ ತೇಜಸ್ಸು. ಅದು ಪ್ರೀತಿ ದೇವತೆಯ ಮಂದಿರ. ಅರಮನೆ ಅಲಂಕೃತಗೊಂಡಿದೆ. ಪ್ರೇಯಸಿಯ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರೀತಿ ದೇವತೆಯ ಆಶೀರ್ವಾದವಿದೆಯೆಂಬ ದೃಢ ನಂಬಿಕೆ. ಆಗಾಗ ನನ್ನ ಪ್ರೇಯಸಿ ನಗುಮೊಗದಿಂದ ಬರುತ್ತಿರುವಂತೆ ಕನಸು. ನಾಚಿಕೆಯಿಂದ ಅರಮನೆಯ ಹೂದೋಟದಲ್ಲೆ ಕುಳಿತಿರುವಳೇನೊ, ಹೂರಾಶಿಯ ಪರಿಮಳ ಆಕೆಯನ್ನು ಸೆಳೆಯಿತೇನೊ, ನೀರಿನ ಬುಗ್ಗೆ ತನ್ನ ಹನಿಯನ್ನು ಪ್ರೇಯಸಿಯೆಡೆ ಚಿಮ್ಮಿಸಿ ಅತ್ತ ಕಡೆ ಆಮಂತ್ರಿಸಿತೇನೊ, ಹಳ್ಳ-ಕೊಳ್ಳಗಳ ಹರಿವಿನ ನಿನಾದ ಆಕೆಯ ದಿಕ್ಕು ತಪ್ಪಿಸಿತೇನೊ ಎಂಬೆಲ್ಲ ಭ್ರಮೆ. ಪ್ರೀತಿಯರಮನೆಯ ಗೋಡೆ-ಕಂಬಗಳು ಸೂಚಿಸುವ ಪ್ರೇಯಸಿಯ ಗುಣಗಾನ ಮಾಡುತ್ತ ಕಾಲ ಕಳೆಯುತ್ತಿದೆ. ಕನಸಿನ ರಾಣಿಯ ಮೇಲೆ ಅದೆಷ್ಟು ನಿರೀಕ್ಶೆ! ಅದೆಷ್ಟು ಗುಣಗಾನ  ಮಾಡಬಹುದು.

          ಈಗೆಲ್ಲ ಇಂತವರೆಲ್ಲಿ ಸಿಗುತ್ತಾರೆಯೆಂದು ಗೋಡೆಯ ಮೇಲೆ ಬರೆದಿರುವ ಗುಣಗಾನವನ್ನು ಒಂದೊಂದಾಗಿ ಅಳಿಸುವ ಕೆಲಸ ಶುರುವಾಗಿದೆ. ವರ್ಣರಂಜಿತ ಬಣ್ಣಗಳು ಪ್ರೇಯಸಿಯ ಮೇಲಿರುವ ನಿರೀಕ್ಷೆಗೆ ಸಾಕ್ಷಿಯಾಗಿದ್ದ ಬರಹಗಳ ಮೇಲೆ ಕುಳಿತು ಗೋಡೆಯ ಮೆರುಗನ್ನು ಹೆಚ್ಚಿಸಿವೆ. ಈಗೇನೊ ಕನಸಿನ ರಾಣಿಯೆಂದು ಹೇಳುತ್ತಿರುವೆ. ಮುಂದೆ ನನಸಾಗುವವಳ್ಯಾರೊ? ಹೃದಯದರಮನೆಯ ಗೋಡೆ-ಕಂಬಗಳು ಸಂಪೂರ್ಣ ವರ್ಣರಂಜಿತವಾಗದೆ ಒಂದೆರಡು ಗುಣಗಾನಗಳು ಶಾಶ್ವತವಾಗಿ ಉಳಿದರೆ ನಮ್ಮ ಮೊಗದಲ್ಲಿ ಆಗಾಗ ನಗುವಿನ ಹೂವು ಅರಳಬಲ್ಲದಲ್ಲವೆ?

Sunday, October 17, 2010

ಪ್ರೀತಿ-ಪ್ರೇಮ


ಪ್ರೀತಿ-ಪ್ರೇಮ ಎಂದಾಗ ಹುಡುಗರಿಗೆಲ್ಲ ತಮ್ಮ ಡ್ರೀಮ್ ಗರ್ಲ್ ಹಾಗೂ ಹುಡ್ಗೀರ್ಗೆಲ್ಲ ತಮ್ಮ ಡ್ರೀಮ್ ಬಾಯ್ ನೆನಪಾಗೋದು ಸಹಜ. ಹಾಲಿವುಡ್ ನಲ್ಲಾಗಲಿ ಬಾಲಿವುಡ್ ನಲ್ಲಾಗಲಿ ಕನಸಿನ ಪ್ರಿಯತಮೆಯಿದ್ದರೆ, ಕೈಗೆ ಸಿಗದ ತಾರೆಯನ್ನು ಮುಟ್ಟುವ ಪ್ರಯತ್ನ ಯಾರೂ ಮಾಡಲಾರರು. ಮಿನುಗುವ ತಾರೆ ದೂರದಿಂದ ಮಾತ್ರ ಸುಂದರವಲ್ಲವೆ! ಹಾಗಾದರೆ ಕೈಗೆಟುಕುವ ಈ ಪ್ರೀತಿ-ಪ್ರೇಮದ ಅನುಭವ ಎಷ್ಟು ಸುಂದರ? ಅದರೊಡಗೂಡಿ ಮೂಡುವ ಮುಂದಿನ ಜೀವನ ಹೇಗಿರಬಹುದು? ನಮ್ಮ ಸುತ್ತ-ಮುತ್ತ ನಾವೆ ಬಯಸಿ ಸಿಗುವ ಪ್ರೀತಿಯ ಬಂಧನ ಶಾಶ್ವತವೆ? ಅಂತಹ ಅನುಪಮ ಶಾಶ್ವತ ಪ್ರೀತಿಯ ಹುಡುಕಾಟದಲ್ಲಿ ಪ್ರತಿಯೊಬ್ಬನೂ ಒಂದಲ್ಲ ಒಂದು ಬಾರಿ ತೊಡಗಿರುತ್ತಾನೆ. ಈ ಸಮಯದಲ್ಲಿ ಆಗಬಹುದಾದ ಸರಿ-ತಪ್ಪುಗಳನ್ನು ಅವಲೋಕಿಸತೊಡಗಿದಾಗ ನನ್ನ ಮನಸಿಗೆ ಬಂದ ಸಾರಾಂಶವನ್ನು ಈ ಬ್ಲಾಗ್ ನಲ್ಲಿ ತೆರೆದಿಡುವ ಪ್ರಯತ್ನ ಮಾಡಿದ್ದೇನೆ.


        ನಮ್ಮನ್ನು ಸಾಮಾನ್ಯವಾಗಿ ಆಕರ್ಷಿಸುವುದು ಸೌಂದರ್ಯ, ಸಾಧನೆ, ಐಶ್ವರ್ಯ. ಪ್ರೀತಿಯ ಮಳೆಹನಿಗೆ ಮಾತುಗಳೂ ಮೋಡವಾಗಬಹುದು. ಕೆಲವೊಬ್ಬರು, ನಾವು ಬಾಳುವುದು ವ್ಯಕ್ತಿಯ ವ್ಯಕ್ತಿತ್ವದ ಜೊತೆ ಎನ್ನುವುದನ್ನು ಮರೆತು ಬಿಡುತ್ತಾರೆ. ಆ ಸತ್ಯವನ್ನು ಒಂದೊಂದು ಬಾರಿ ಕಣ್ಮುಚ್ಚಿ ನೆನೆದುಕೊಳ್ಳುವ ಅವಶ್ಯಕತೆಯಿರುತ್ತದೆ. ಯಾಕೆಂದರೆ ಪ್ರೀತಿ-ಪ್ರೇಮದ ಬಲೆಗೆ ಸಿಕ್ಕ ಮೇಲೆ ಹೊರಬರುವುದು ಕಷ್ಟವಾಗಲೂಬಹುದು. ಅಂತಹ ಬಂಧನವನ್ನು ಮನಸಾರೆ ಇಷ್ಟ ಪಡಬೇಕೆ ಹೊರತು ಇಷ್ಟ ಪಡುವುದು ಅನಿವಾರ್ಯವಾಗಬಾರದಲ್ಲವೆ. ವ್ಯಕ್ತಿಯ ವ್ಯಕ್ತಿತ್ವವನ್ನು ಆತನ/ಆಕೆಯ ಸೌಂದರ್ಯ, ಸಾಧನೆ, ಐಶ್ವರ್ಯ, ಕೌಟುಂಬಿಕ ಹಿನ್ನೆಲೆಗಳು ಖಂಡಿತವಗಿಯೂ ಪ್ರಭಾವ ಬೀರುತ್ತವೆ. "ನಮಗೆ ಅನುರೂಪವಾದ ವ್ಯಕ್ತಿತ್ವದ ಆಯ್ಕೆಗೆ, ನಮ್ಮ ವ್ಯಕ್ತಿತ್ವದ ಅರಿವು ಸಾಕಾಗಬಲ್ಲದು" ಎನ್ನುವುದು ನನ್ನ ಅಭಿಪ್ರಾಯ. ಎಲ್ಲರೂ ತಮಗೆ ಅನುರೂಪವಾದ ವ್ಯಕ್ತಿತ್ವವನ್ನು ಪ್ರೀತಿಸಲಿ, ಪ್ರೀತಿಯ ಬಂಧನ ಶಾಶ್ವತವಾಗಲಿ.


        ಪ್ರೀತಿ-ಪ್ರೇಮ, ಜೀವನ ಇಂತಹ ವಿಷಯಗಳಲ್ಲಿ ನಾನೇನು ಅನುಭವಿಯಲ್ಲ. ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೇನೆ. ನನ್ನ ಮನಸಿನ ಮಾತುಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.

Monday, October 11, 2010

ಮನಸಿನ ಮಾತು



ಇಲ್ಲಿ ನಾನು ಬರೆಯುತ್ತಿರುವುದೆಲ್ಲ ನನ್ನ ಮನಸಿಗೆ ಅನ್ನಿಸಿದ್ದು, ನಾನು ತಿಳಿದುಕೊಂಡದ್ದು. ಇಲ್ಲಿಯ ಮಾತುಗಳನ್ನೆಲ್ಲ ನೀವು ನನ್ನ ಜೀವನ ಶೈಲಿಯಲ್ಲಿ, ನಡತೆಯಲ್ಲಿ ಕಾಣಬಹುದೇನೊ. ನನ್ನ ಮನಸಿನ ಆಳದಲ್ಲಿರುವ ವಿಚಾರಗಳನ್ನೆಲ್ಲ ಹುಡುಕುತ್ತ ಬರೆದಿರುವ ನನ್ನ "ಮನಸಿನ ಮಾತು" ಈ ಬರಹ.


ಜೀವನ ಮತ್ತು ಅದರ ಮೌಲ್ಯಗಳ ಕುರಿತೆಲ್ಲ ಮಾತನಾಡುವ ಪ್ರಬುದ್ಧ ವಯಸ್ಸು ನನ್ನದಲ್ಲ. ಆದರು ಕೂಡ ಚಿಕ್ಕ- ಪುಟ್ಟ ಅನುಭವಗಳ ಸುತ್ತ ಬರುವ ಚಿಂತನೆಗಳನ್ನು ನಾವು ಅನುಭವಿಸಿದರೆ ಧನಾತ್ಮಕ ಬೆಳವಣಿಗೆ ಕಂಡು ಬರಬಹುದಲ್ಲವೇ. ನಮ್ಮ ಈ ಪಯಣ ಎಷ್ಟೊಂದು ಸೋಲು-ಗೆಲುವುಗಳಿಂದ ತುಂಬಿರುತ್ತದೆ. ನಮಗಾಗುವ ಪ್ರತಿಯೊಂದು ಸೋಲು-ಗೆಲುವಿಗೂ ನಾವೇ ಹೊಣೆಯಲ್ಲವೆ. ನಮ್ಮ ಒಂದು ಗೆಳೆತನದಲ್ಲಿ ಮೋಸವಾದರೆ ಗೆಳೆತನ ಬಯಸಿದ ನಾವೇ ಮೂರ್ಖರಲ್ಲವೆ. ಇಂತಹ ಒಂದು ಪ್ರಮಾದದಿಂದ ಎಷ್ಟೊಂದು ನಾವು ಮನ ನೊಂದುಕೊಳ್ಳುತ್ತೇವೆ. ಹಾಗಾದರೆ ಮನುಷ್ಯನ ಒಳ್ಳೆತನ, ಪ್ರಾಮಾಣಿಕತೆಯನ್ನು ಅಳೆಯುವ ಮಾಪನದ ಸಂಶೋಧನೆ ನಡೆಯಬೇಕೆ?


ಸಾಮಾನ್ಯವಾಗಿ ಪ್ರತಿಯೊಬ್ಬ ತಂದೆ-ತಾಯಿಯು ತಮ್ಮ ಮಕ್ಕಳಿಗೆ ಶಿಷ್ಟಾಚಾರವನ್ನು ಕಲಿಸುತ್ತಾರೆ. ನನಗನ್ನಿಸುವ ಪ್ರಕಾರ "ನೀವೇನಾದ್ರು ನನ್ನಲ್ಲಿ ಒಳ್ಳೆತನವನ್ನು ಕಂಡರೆ ಅದು ನನ್ನ ಅಪ್ಪ-ಅಮ್ಮ ಕಲಿಸಿದ್ದು. ನನ್ನಿಂದ ಏನಾದ್ರು ಪ್ರಮಾದ ನಡೆದು ಹೋದರೆ ಅದು ನಾನು ಬೆಳೆಸಿಕೊಂಡ ಗುಣ". ನಾನು ಅನೇಕ ಬಾರಿ ನನ್ನ ಮನೆಯವರು, ನಾನು ಹುಟ್ಟಿ-ಬೆಳೆದ ಊರು, ನನ್ನ ಎಷ್ಟೋ ಜನ ಬಂಧು-ಬಳಗ, ಗೆಳೆಯರನ್ನು ನೆನೆದುಕೊಂಡು ನಾನು ನಿಜವಾಗಿಯೂ ಪುಣ್ಯವಂತ ಎಂದು ಸಂತೋಷ ಪಟ್ಟಿದ್ದೇನೆ. ಎಲ್ಲ ಹೇಳುವಂತೆ ಮುಖ-ಮಾತು ಮನಸ್ಸಿನ ಕನ್ನಡಿಯಂತೆ. ಆದರು ನಿಜವಾದ ಮನುಷ್ಯನ ಆಂತರ್ಯದ ಅರಿವಾಗುವುದು ಒಡನಾಟದಿಂದ ಹಾಗು ಅವನ ಸೂಕ್ಷ್ಮ ವೀಕ್ಷಣೆಯಿಂದ ಮಾತ್ರ ಎನ್ನುವುದು ನನ್ನ ಭಾವನೆ.

ನನಗೆ ಪ್ರತಿಯೊಬ್ಬನ ಮನಸ್ಸನ್ನು ಅರಿಯುವ ಕುತೂಹಲವಿದೆ. ವಿಶ್ವದ ಎಲ್ಲ ರೀತಿಯ ಮನುಷ್ಯರ ಜೀವನ ಶೈಲಿಯನ್ನು ತಿಳಿದುಕೊಳ್ಳುವ ಹಂಬಲವಿದೆ.ನನ್ನೀ ಜೀವನಕ್ಕೊಂದು ಅಡಿಪಾಯ ಹಾಕಿಕೊಂಡು ನನ್ನ ಕನಸನ್ನು ಸಾಕಾರಗೊಳಿಸುವತ್ತ ಪಯಣ ಬೆಳೆಸಲು ಮುಂದಾಗುತ್ತೇನೆ. ನಮಗೆ ಸಿಗುವ ಖುಷಿ ಸುಖವೆಲ್ಲ ನಮ್ಮ ಪ್ರಾಮಾಣಿಕ ಪ್ರಯತ್ನಗಳ ಫಲಶ್ರುತಿಯೆಂದು ನಾವು ನಡೆದು ಬಂದ ದಾರಿಯ ಸೂಕ್ಷ್ಮಾವಲೋಕನದಿಂದ ತಿಳಿದು ಬರುತ್ತದೆ. ನಾನೊಬ್ಬ ಬರಹಗಾರನಲ್ಲ. ನನ್ನ ಮನಸ್ಸಿನ ಭಾವನೆಗಳನ್ನು ಕೆದಕುತ್ತ ಬರೆದಿರುವ ಈ ಬರಹದಲ್ಲಿ ಒಂದು ಮಾದರಿ ಲೇಖನದ ಗುಣಲಕ್ಷಣಗಳು ಇಲ್ಲದಿರಬಹುದು. ನನ್ನ ಮೊದಲ ಬ್ಲಾಗ್ ನಲ್ಲಿ ನನ್ನ ಕೆಲವು ಮನಸ್ಸಿನ ಮಾತುಗಳನ್ನು ವ್ಯಕ್ತಪಡಿಸಿದ್ದೇನೆ. ಮುಂದಿನ ಬ್ಲಾಗ್ ಗಳಲ್ಲಿ ಕೆಲವೊಂದು ಪ್ರವಾಸದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.